ಅಪ್ಪೆ ಹುಳಿ ಅಥವಾ ನೀರ್ಗೊಜ್ಜು (ನೀರು ಗೊಜ್ಜು) ಅಥವಾ ಸಾಂಬ್ರಾಣಿ ಹೆಚ್ಚಾಗಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಇದು ಸ್ವಲ್ಪ ಹುಳಿಯಾಗಿದ್ದು ಕುಡಿಯಲು ಬರುತ್ತದೆ. ಹೆಚ್ಚಾಗಿ ಇದನ್ನು ಅಪ್ಪೆಕಾಯಿ ಎಂದು ಕರೆಯಲ್ಪಡುವ ಮಾವಿನಕಾಯಿಯಿಂದ ಮಾಡುವುದರಿಂದ ಅಪ್ಪೆಹುಳಿ ಎಂದು ಹೆಸರು ಬಂದಿದೆ. ಆದರೆ ಇದನ್ನು ಅಪ್ಪೆಕಾಯಿ ಅಲ್ಲದೆ, ನಿಂಬೆಹಣ್ಣು, ಬಿಂಬಳಕಾಯಿ, ಕಂಚಿಕಾಯಿಯಿಂದ ಕೂಡ ತಯಾರಿಸಬಹುದು. == ಬೇಕಾಗುವ ಪದಾರ್ಥಗಳು == ಅಪ್ಪೆಕಾಯಿ (ಮಾವಿನಕಾಯಿ) / ನಿಂಬೆ ಹಣ್ಣು / ಬಿಂಬಳ ಕಾಯಿ / ಕಂಚೀ ಕಾಯಿ ನೀರು ಉಪ್ಪು ಸಕ್ಕರೆ (ಕೊಬ್ಬರಿ) ಎಣ್ಣೆ ಸಾಸಿವೆ ಇಂಗು ಒಣಮೆಣಸು ಹಸಿಮೆಣಸು == ಮಾಡುವ ವಿಧಾನ == ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ ಬೇಯಿಸಿ. ನಿಂಬೆಹಣ್ಣಾದರೆ ರಸ ಹಿಂಡಬೇಕು. ಆರಿದ ನಂತರ ಚೆನ್ನಾಗಿ ಕಿವುಚಿ. ತಕ್ಕಷ್ಟು ನೀರು, ಉಪ್ಪು, ಚಿಟಿಕೆ ಸಕ್ಕರೆ ಹಾಕಿ. ಸಾಸಿವೆ, ಒಣಮೆಣಸಿನ ಚೂರು, ಇಂಗು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ. ಅಥವಾ ಮಾವಿನಕಾಯಿ ಸಿಪ್ಪೆ ಸಹಿತ ಕತ್ತರಿಸಿ ೧ ಹಸಿ ಮೆಣಸು ಹಾಕಿ ಮಿಕ್ಸಿಗೆ ಹಾಕಿ. ನಂತರ ಅದನ್ನು ಸೋಸಿ, ಅದಕ್ಕೆ ನೀರು ಸೇರಿಸಿ ಉಪ್ಪು ಹಾಕಿ ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಸಾಸಿವೆ, ಇಂಗು, ಒಣಮೆಣಸು ಹಾಕಿ ಒಗ್ಗರಿಸಿದ ನಂತರ ಒಣ ಮೆಣಸನ್ನು ಸ್ವಲ್ಪ ನುರಿಯಿರಿ.